Thursday, December 31, 2009

ಶ್ರೀಕೃಷ್ಣದೇವರಾಯ

ಸ್ನೇಹಿತರೆ,
ನನ್ನ 5 ನೇ ಪುಸ್ತಕ ಶ್ರೀಕೃಷ್ಣದೇವರಾಯ ಬಿಡುಗಡೆಗೆ ಸಿದ್ಧವಾಗಿದೆ. ಪುಸ್ತಕದ ಬಿಡುಗಡೆ ಸಮಾರಂಭದ ಆಹ್ವಾನ ಪತ್ರಿಕೆ ಮತ್ತು ಮುಖಪುಟಗಳು ಇಲ್ಲಿವೆ. ಬಿಡುವು ಮಾಡಿಕೊಂಡು ಬನ್ನಿ.


Wednesday, May 13, 2009

ಮುಸ್ಸಂಜೆ ಮುಖಾಮುಖಿಯಾದ ಚಂದ್ರಶೇಖರ್

ಈ ಟಿವಿ ಕನ್ನಡ ವಾಹಿನಿಯ ಮುಖ್ಯಸ್ಥರಲ್ಲೊಬ್ಬರಾಗಿರುವ ಶ್ರೀ ಚಂದ್ರಶೇಖರ್ ಅವರದ್ದು ಕವಿ ಮನಸ್ಸು. ಪ್ರಾಯಶ: ಕವಿತೆ,ಕವನಗಳ ಬಗ್ಗೆ ಅವರು ಬ್ಲಾಗಿಸಿದಷ್ಟು ಮತ್ತೆ ಯಾರಾದರೂ ಬ್ಲಾಗಿಸಿರುವುದು ನನಗೆ ಗೊತ್ತಿಲ್ಲ. ಇತ್ತೀಚೆಗೆ ಅವರ ಮೊದಲ ಕವನ ಸಂಕಲನ “ಮುಸ್ಸಂಜೆಯ ಮುಖಾಮುಖಿ” ಬೆಂಗಳೂರಿನ ಯವನಿಕಾದಲ್ಲಿ ನಡೆಯಿತು. ಖ್ಯಾತ ಸಾಹಿತಿ ಹಾಗು ನಾಟಕಕಾರರಾದ ಡಾ.ಎಚ್. ಎಸ್.ವೆಂಕಟೇಶಮೂರ್ತಿಯವರು
ಪುಸ್ತಕ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಪ್ರೊ.ಬರಗೂರು ರಾಮಚಂದ್ರಪ್ಪ, ಖ್ಯಾತ ಚಿಂತಕರು ಹಾಗು ಚಲನಚಿತ್ರ
ನಿರ್ದೇಶಕರು, ವಿಶೇಷ ಅತಿಥಿಗಳಾಗಿ ಡಾ.ನಟರಾಜ್ ಹುಳಿಯಾರ್ ಹಾಗೂ ಇತರರು ಆಗಮಿಸಿದ್ದರು. ಕಾರ್ಯಕ್ರಮದ ಕೆಲ ಫೋಟೋಗಳು, ಪುಸ್ತಕದ ಮುಖಪುಟ, ಹಾಗೂ ಎರಡು ಸ್ಯಾಂಪಲ್ ಕವನಗಳು ಇಲ್ಲಿವೆ. ಹೆಚ್ಚಿನ ಕವನಗಳಿಗೆ ಅವರ ಬ್ಲಾಗ್ http://www.koogu.blogspot.com/
ಇಲ್ಲಿಗೆ ಭೇಟಿ ನೀಡಬಹುದು.








ಅನಂತ ಮೌನ
ಈ ಅನಂತ
ಮೌನ
ಚಿಂತನ, ಮಂಥನ
ಚಿರಯೌವನ.

ಬಿರುಗಾಳಿಗೆ ಮೈಯೊಡ್ಡಿ
ಭೋರ್ಗರೆವ ಅಲೆಗಳ
ಮೇಲೆ ರುದ್ರನರ್ತನ.

ಕಾಲಗರ್ಭದ ಮಿತಿ
ಭಾವ, ಬಂಧು
ಸಿಂಧೂರ ಸೌಂಧರ್ಯ
ನಿಸರ್ಗ ಚಿತ್ತದ ಜೊತೆ ಸರಸ.

ಈ ಹಾದಿಯಲ್ಲೆಲ್ಲಾ
ಕಲ್ಲು, ಮುಳ್ಳು
ಸಾಲು ಮರಗಳ
ನೆರಳು.

ಪಾಪಿಷ್ಟ, ಕೋಪಿಷ್ಟ
ಸಾಧು, ಸಂತ
ಇಳೆಗೆ ಎಲ್ಲವೂ
ಮೀಸಲು.

ನೀರವ ಮೌನ
ಒಮ್ಮೆಗೇ
ಬಿರುಗಾಳಿಯ
ಆಕ್ರಂದನ
ಮತ್ತದೇ ಮೌನ.


ಕವಿಗೂ ಉಂಟು ಒಂದು ಸ್ಧಾನ
ಮೋಡ ತಡೆದು
ಮಳೆ ಸುರಿಸಿದ
ಬೆಟ್ಟಕ್ಕೆ
ನೀರಿನ ಅಭಾವ.

ಬೆಟ್ಟದಿಳಿಜಾರಿನಲಿ
ನೀರು ನಿಲ್ಲಲು
ಸಾಧ್ಯವೆ?
ತಡೆಗೋಡೆ ವಿರಳ.

ಕೆಳಗೆಲ್ಲೋ
ಕಟ್ಚಲೂ ಬಹುದೊಂದು
ಅಣೆಕಟ್ಟು
ಅದಕ್ಕೇನು ಲಾಭ?

ಆದರೂ ಅದಕ್ಕೆ
ನಿಶ್ಚಿಂತೆ
ಇಲ್ಲ ಕಿಂಚಿತ್ತು
ಹಸಿರಿನ ಕೊರತೆ.

ಕುಡಿಯಲು ನೀರು
ಉರಿಬಿಸಿಲಿಗೆ ನೆರಳು
ಕಲ್ಲುಗುಂಡುಗಳಡಿ
ಬೀಸುವ ತಂಗಾಳಿ.

ಇಲ್ಲಿ ಜಾರುವ ಕವಿಗೂ
ಉಂಟು ಒಂದು ಸ್ಧಾನ.

Friday, May 1, 2009

ಮಿಥಿಕ್ ಸೊಸೈಟಿ 100 ಹಾಗೂ ಪ್ರಶಸ್ತಿ

ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮಿಥಿಕ್ ಸೊಸೈಟಿ ಇದೇ ಮೇ 3 ರಿಂದ 5 ನೇ ತಾರೀಖಿನವರೆಗೆ ಮೂರು ದಿನಗಳ ಸಮಾರೋಪ ಸಮಾರಂಭ ಆಚರಿಸುತ್ತಿದೆ.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 7 ಜನ ಹಿರಿಯರನ್ನು ಹಾಗೂ 7 ಜನ ಯುವ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸಲಿದೆ. ಯುವ ಸಾಧಕರ ಪಟ್ಟಿಯಲ್ಲಿ ನನ್ನ ಹೆಸರೂ ಇದೆ.

ಉಳಿದಂತೆ ಎಲ್ಲಾ ಪ್ರಶಸ್ತಿ ವಿಜೇತರ ಪಟ್ಟಿ ಹಾಗೂ ಕಾರ್ಯಕ್ರಮದ ವಿವರಣೆ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. ಅದರ ಸುದ್ದಿ ತುಣುಕು ಇಲ್ಲಿದೆ.

ಗಮನಕ್ಕೆ: ದೊಡ್ಡ ಇಮೇಜ್ ಗೆ ಫೋಟೋ ಮೇಲೆ ಕ್ಲಿಕ್ ಮಾಡಿ.

Thursday, April 30, 2009

ಪೈಲೂರು ಶಿವರಾಮಯ್ಯನವರ ಬದುಕು-ಪ್ರವೃತ್ತಿಗಳ ಸಾಹಸ ಕಥನ

ಸತತವಾಗಿ ಏನಾದರೂ ಮಾಡುತ್ತಲೇ ಇರುವ ಶಿವರಾಂ ಪೈಲೂರು ಅವರು ಈಗ ತಮ್ಮ ಅಜ್ಜ ಪೈಲೂರು ಶಿವರಾಮಯ್ಯನವರ ಬಗ್ಗೆ ಪುಸ್ತಕ ಹೊರ ತರುತ್ತಿದ್ದಾರೆ. ಆಹ್ವಾನ ಪತ್ರಿಕೆ ಇಲ್ಲಿದೆ. ಮಾಹಿತಿಗೆ ಶಿವರಾಂ ಪೈಲೂರು -94484-10077 ಇಲ್ಲಿಗೆ ಸಂಪರ್ಕಿಸಬಹುದು.

Wednesday, April 29, 2009

ಮಣಿಕಾಂತ್ ಬಯಲು ಮಾಡಿದ ಸುಳ್ಳುಗಳು

ಕೃಪೆ: ಅವಧಿ
ಎ ಆರ್ ಮಣಿಕಾಂತ್ ಬಗೆಗಿನ ಪ್ರೀತಿಗೆ ಕಲಾಕ್ಷೇತ್ರ ಸಾಕ್ಷಿಯಾಗಿ ಹೋಗಿತ್ತು. ಪುಸ್ತಕ ಓದುವವರು ಇಲ್ಲವಾಗುತ್ತಿದ್ದಾರೆ, ಪುಸ್ತಕದ ಕಾರ್ಯಕ್ರಮಕ್ಕೆ ಬರುವವರು ಇಲ್ಲವಾಗುತ್ತಿದ್ದಾರೆ ಎಂದು ಬೆಂಗಳೂರು ಸದಾ ಹೇಳುತ್ತಿದ್ದ ಎರಡು ಸುಳ್ಳುಗಳನ್ನು ಮಣಿಕಾಂತ್ ಬಟಾಬಯಲು ಮಾಡಿದರು.

ನೀಲಿಮಾ ಪ್ರಕಾಶನ’ದ ಪುಸ್ತಕಗಳು ನೀರಿನಂತೆ ಖರ್ಚಾಯಿತು. ರವೀಂದ್ರ ಕಲಾಕ್ಷೇತ್ರಕ್ಕೆ ಬಂದವರಿಗೆ ಹಾಡು ಹಬ್ಬದ ಜೊತೆಗೆ ಪ್ರಕಾಶ್ ರೈ, ವಿಶ್ವೇಶ್ವರ ಭಟ್, ರವಿ ಬೆಳಗೆರೆ, ಕೃಷ್ಣೇಗೌಡ ಅವರ ಮಾತು ಕೇಳುವ ಅವಕಾಶ. ಎಲ್ಲಕ್ಕಿಂತ ಹೆಚ್ಚಾಗಿ ಅಮ್ಮನನ್ನು ನೆನಪಿಸಿಕೊಳ್ಳಲು ಒಂದು ನೆಪ ಸಿಕ್ಕಿತು.

ಅಲ್ಲಿನ ಒಂದು ನೋಟ ಇಲ್ಲಿದೆ. ಚಿತ್ರಗಳೆಲ್ಲವೂ ನಮ್ಮ ಮಲ್ಲಿ ಆರ್ಥಾತ್ ಡಿ ಜಿ ಮಲ್ಲಿಕಾರ್ಜುನ್ ಅವರದ್ದು.







Tuesday, April 28, 2009

ದೇಶ-ಕಾಲ, ಛಂದ ಪುಸ್ತಕ ಹಾಗೂ ಶ್ರೀನಿವಾಸ ವೈದ್ಯರ ಸಾಹಿತ್ಯ

ಶ್ರೀನಿವಾಸ ವೈದ್ಯರ ಸಾಹಿತ್ಯದ ಬಗ್ಗೆ ಮಾತನಾಡಲು ದೇಶ-ಕಾಲ ಮತ್ತು ಛಂದ ಪುಸ್ತಕವು ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿವೆ. ವಸುಧೇಂಧ್ರ ಅವರು ಅಸ್ಥೆಯಿಂದ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ. ಆಹ್ವಾನ ಪತ್ರಿಕೆ ಇಲ್ಲಿದೆ.

ಸ್ಥಳ: ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನ ಗುಡಿ

ದಿನಾಂಕ: ಶುಕ್ರವಾರ, ಮೇ 1 ನೇ 2009

ಸಮಯ: ಬೆಳಿಗ್ಗೆ 10:30 ಕ್ಕೆ

Sunday, April 26, 2009

ಕ್ಯಾಮ್ ನಿಂದ 5 ಪುಸ್ತಕಗಳು

ಶ್ರೀ ಪಡ್ರೆ, ಪೂರ್ಣಪ್ರಜ್ಞ ಬೇಳೂರು, ಆನಂದ ತೀರ್ಥ ಪ್ಯಾಟಿ, ಶಿವರಾಂ ಪೈಲೂರು ಇವರೆಲ್ಲ ಬರೆದ 5 ಅತ್ಯುಪಯುಕ್ತ ಪುಸ್ತಕಗಳು ಮೇ 2 ರಂದು ಧಾರವಾಡದಲ್ಲಿ ಬಿಡುಗಡೆಯಾಗಲಿವೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆ ಇಲ್ಲಿದೆ. ಹೆಚ್ಚಿನ ಮಾಹಿತಿಗೆ ಶಿವರಾಂ ಪೈಲೂರು: 9448410077 ಇಲ್ಲಿಗೆ ಸಂಪರ್ಕಿಸಬಹುದು.

Sunday, April 19, 2009

ಉದ್ಯಮಿಯ ಕಣ್ಣಲ್ಲಿ ಹೊಳೆಯುವ ಇಂಡಿಯಾ



(ಗಮನಕ್ಕೆ: ಇದು ವಿಕಾಸ್ ಹೆಗಡೆ ಅವರ 'ವಿಕಾಸ ವಾದ' ಬ್ಲಾಗ್ ನಿಂದ ಎತ್ತಿಕೊಂಡ ನಂದನ್ ನಿಲಕೇಣಿ ಅವರ ಇಮೇಜಿಂಗ್ ಇಂಡಿಯಾ ಪುಸ್ತಕ ಕುರಿತ ಬರಹ)

ಇದುವರೆಗೂ ರಾಜಕಾರಣಿಗಳು, ವಿಚಾರವಾದಿಗಳು, ಧಾರ್ಮಿಕರು ಭಾರತವನ್ನು, ಭಾರತದ ಭವಿಷ್ಯವನ್ನು ಹಲವಾರು ರೀತಿ ಊಹಿಸಿಕೊಂಡಿರಬಹುದು. ಆದರೆ ಉದ್ಯಮಿಯೊಬ್ಬರ ಊಹೆಯ ಭಾರತ ಹೇಗಿರುತ್ತದೆ ಎಂಬ ಕಲ್ಪನೆ ಹೊಸದು. ಇದೇ ಕುತೂಹಲದಿಂದ ಕೈಗೆತ್ತಿಕೊಂಡಿದ್ದು ದೇಶದ ಪ್ರತಿಷ್ಠಿತ ಕಂಪನಿ ಇನ್ಫೊಸಿಸ್ ನ ಮುಖ್ಯಸ್ಥರಲ್ಲೊಬ್ಬರಾದ ನಂದನ್ ನೀಲೇಕಣಿಯವರಿಂದ ಇತ್ತೀಚೆಗೆ ಬರೆಯಲ್ಪಟ್ಟ ಪುಸ್ತಕ ’ಇಮ್ಯಾಜಿನಿಂಗ್ ಇಂಡಿಯಾ’.

’ಐಡಿಯಾಸ್ ಫಾರ್ ದಿ ನ್ಯೂ ಸೆಂಚುರಿ(ಹೊಸ ಶತಮಾನಕ್ಕೆ ವಿಚಾರಗಳು)’ ಎಂಬ ಅಡಿಬರಹದ ಈ ಪುಸ್ತಕದಲ್ಲಿ ನಂದನ್ ನೀಲೇಕಣಿಯವರು ವಿವಿಧ ಮಾಹಿತಿಗಳೊಂದಿಗೆ ಭಾರತವನ್ನು ಒಂದು ಭರವಸೆಯ ದೇಶವಾಗಿ ವಿಶ್ಲೇಷಿಸುತ್ತಾ ಹೋಗುತ್ತಾರೆ. ಭಾರತವು ಸ್ವಾತಂತ್ರ್ಯಾ ನಂತರ ಬೆಳೆದು ಬಂದ ರೀತಿ, ಭಾರತದ ಸಾಮಾಜಿಕ, ರಾಜಕೀಯ ಬದಲಾವಣೆಗಳು, ಜಗತ್ತು ಗುರುತಿಸುವ ದೇಶವಾಗಿ ಹೊರಹೊಮ್ಮಿದ ರೀತಿಯ ಜೊತೆಗೆ ಒಂದು ಅತ್ಯುತ್ತಮ ಮಾನವ ಸಂಪನ್ಮೂಲವುಳ್ಳ ದೇಶವಾಗಿ ಈ ಶತಮಾನದ ಮುಂದಿನ ವರ್ಷಗಳು ಭಾರತದ್ದೇ ಆಗಿರುತ್ತವೆ ಎಂಬ ವಿಶಿಷ್ಟ ಆಶಾಭಾವನೆಯನ್ನು ಮೂಡಿಸುತ್ತದೆ ಪುಸ್ತಕ. ಬರೀ ಭಾರತದಲ್ಲಿರುವ ಸಮಸ್ಯೆಗಳನ್ನು ಮಾತ್ರ ಗುರುತಿಸಿ ಟೀಕಿಸುವ ಕೆಲಸ ಮಾಡದೇ ಪ್ರತಿಯೊಂದಕ್ಕೂ ಸಕಾರಾತ್ಮಕವಾದ ಉಪಾಯಗಳನ್ನು ಯೋಚಿಸಿರುವುದು, ಆ ನಿಟ್ಟಿನಲ್ಲಿ ವಿಚಾರಗಳನ್ನು ಮಂಡಿಸಿರುವುದು ಈ ಪುಸ್ತಕದ ವಿಶೇಷ. ನೀಲೇಕಣಿಯವರು ಭಾರತದ ಜನಸಂಖ್ಯೆಯನ್ನು ಹೇಗೆ ಲಾಭಕರವಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಬಹುದೆಂದು ತಿಳಿಸುತ್ತಾರೆ. ಜನಸಂಖ್ಯಾ ಶಾಸ್ತ್ರದ ಪ್ರಕಾರ ಇನ್ನು ಕೆಲವು ದಶಕಗಳಲ್ಲಿ ವರ್ಷಗಳಲ್ಲಿ ಭಾರತವು ಜಗತ್ತಿನಲ್ಲಿ ಅತಿಹೆಚ್ಚು ಯುವಜನಾಂಗವನ್ನು ಹೊಂದಿದ ದೇಶವಾಗಲಿದ್ದು ಇಡೀ ಜಗತ್ತಿಗೆ ಭಾರತವೆಂಬುದು ಒಂದು ಅನಿವಾರ್ಯ ಎಂಬ ಪರಿಸ್ಥಿತಿಯ ಸೃಷ್ಟಿಯ ಬಗ್ಗೆ ಹೇಳುತ್ತಾರೆ. ಈ ದೇಶದ ಮಕ್ಕಳಿಗೆ, ಯುವಕರಿಗೆ ಮೂಲಭೂತ ಸೌಕರ್ಯಗಳಿಂದ ಹಿಡಿದು, ಉನ್ನತ ವಿದ್ಯಾಭ್ಯಾಸ ಮುಂತಾದ ಸಂಪನ್ಮೂಲಗಳು ಎಟುಕುವಂತೆ ಮಾಡುವುದು ಅಗತ್ಯ ಎಂಬುದನ್ನು ಪುಸ್ತಕದಲ್ಲಿ ಪ್ರತಿಪಾದಿಸುತ್ತಾ ಹೋಗುತ್ತಾರೆ. ಖಂಡಿತ ಇದು ಇನ್ಪೋಸಿಸ್ ಹುಟ್ಟು, ಬೆಳವಣಿಗೆ, ಯಶೋಗಾಥೆಯ ಪುಸ್ತಕವಲ್ಲ.

’ಆಕಸ್ಮಿಕ ಉದ್ಯಮಿಯಿಂದ ಟಿಪ್ಪಣಿಗಳು’ ಎಂಬ ಮುನ್ನುಡಿಯಲ್ಲಿ "ನಿಮಗೆ ಇನ್ಪೋಸಿಸ್ ಒಳಗೆ ಇಷ್ಟು ಚಂದದ ರಸ್ತೆಗಳನ್ನು ಮಾಡಲು ಸಾಧ್ಯವಾದರೆ ಅದು ಹೊರಗೆ ಏಕೆ ಸಾಧ್ಯವಾಗಿಲ್ಲ" ಎಂಬ ವಿದೇಶೀಯನೊಬ್ಬನ ಪ್ರಶ್ನೆಯಿಂದಲೇ ಶುರುಮಾಡುತ್ತಾರೆ. ಇಲ್ಲಿನ ರಾಜಕೀಯ ವ್ಯವಸ್ಥೆಯ ಸಂಕೀರ್ಣತೆಗಳನ್ನು ತಿಳಿಸುತ್ತಾರೆ. ಚುನಾವಣೆಯ ವಿಷಯಕ್ಕೆ ಬಂದಾಗ ಇಲ್ಲಿ ಗೆಲ್ಲುವುದಷ್ಟೆ ಮುಖ್ಯವಾಗುವುದರಿಂದ ಒಬ್ಬ ಉದ್ಯಮಿಯಾಗಿ ರಾಜಕೀಯ ಕ್ಷೇತ್ರದ ಬಗ್ಗೆ ಬಹಳಷ್ಟು ಅರಿವಿದ್ದರೂ ಕೂಡ ತನ್ನಂತವರು ಈ ವ್ಯವಸ್ಥೆಯಲ್ಲಿ ’ಚುನಾಯಿತ’ರಾಗಲು ಅರ್ಹತೆಗಳಿಲ್ಲದಿರುವುದೇ ಕಾರಣ ಎಂಬ ಮಾತುಗಳು ಯೋಚನೆಗೆ ಹಚ್ಚುತ್ತವೆ. ನೆಹರು, ಇಂದಿರಾ ಯುಗ , ಭಾರತದಲ್ಲಿ ಜನಸಂಖ್ಯೆ ನಿಯಂತ್ರಣದ ವಿಫಲತೆ, ಕೈಗಾರಿಕೀಕರಣ, ಮತಬ್ಯಾಂಕ್ ರಾಜಕೀಯ , ಜಾತಿ, ಮೀಸಲಾತಿ ಮುಂತಾದ ರಾಜಕೀಯ, ಇತಿಹಾಸ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಸಂಕ್ಷಿಪ್ತ ವಿವರಣೆಯಿದ್ದು ಇತಿಹಾಸ ಕಾಲದಿಂದ ಈಗಿನವರೆಗೆ ಇಡೀ ಭಾರತದ ಬಗ್ಗೆ ಒಂದು ಸಮಗ್ರ ಚಿತ್ರಣವನ್ನು ಕಟ್ಟಿಕೊಡುತ್ತದೆ.


ಪುಸ್ತಕವು ನಾಲ್ಕು ಭಾಗಗಳನ್ನೊಳಗೊಂಡಿದೆ.

ಮೊದಲನೆಯ ಭಾಗವು ಬದಲಾದ ಭಾರತದ ಪ್ರಸ್ತುತ ಚಿತ್ರಣವನ್ನು ಒಳಗೊಂಡಿದೆ. ಇವತ್ತಿನ ಬದಲಾದ ಪರಿಸ್ಥಿತಿಯಲ್ಲಿ ಉದ್ಯಮಿಯಾಗಲು ಇರುವ ಮುಕ್ತ ಅವಕಾಶಗಳು, ಇಂಗ್ಲಿಷ್ ಭಾಷೆಯ, ಶಿಕ್ಷಣದ ಅಗತ್ಯತೆ, ಭಾರತದ ಮಾರುಕಟ್ಟೆಯನ್ನು ಜಗತ್ತಿಗೆ ತೆರೆದಿಡುವಿಕೆ ಮುಂತಾದ ವಿಷಯಗಳಿವೆ. ಭಾರತದಲ್ಲಿ ಜನ ಈಗ ಏನನ್ನು ಬಯಸುತ್ತಿದ್ದಾರೆ, ಎಷ್ಟೆಲ್ಲಾ ಸಾಂಸ್ಕೃತಿಕ, ಸಾಮಾಜಿಕ ವ್ಯತ್ಯಾಸಗಳ ನಡುವೆಯೂ ಇವತ್ತು ದೇಶದ ಜನರಲ್ಲಿ, ಕೊನೇಪಕ್ಷ ನಗರದ ಮತ್ತು ಮಧ್ಯಮ ವರ್ಗದ ಜನರಲ್ಲಿ ಒಂದು ಅನಿವಾರ್ಯ ಬಹುಮತವಿರುವಂತಹ ವಿಚಾರಗಳಿವೆ.

ಎರಡನೇಯ ಮತ್ತು ಮೂರನೆಯ ಭಾಗಗಳಲ್ಲಿ ಭಾರತದಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಬದಲಾವಣೆಗಳು ಆಗುತ್ತಿವೆ, ಬೆಳವಣಿಗೆಗಳು ಆಗಬೇಕಿದೆ ಎಂಬ ವಿಷಯವಿದೆ. ಸಾಕ್ಷರತೆ, ನಗರೀಕರಣ, ಇನ್ಫ್ರಾಸ್ಟ್ರಕ್ಚರ್, ಸಾರಿಗೆ, ದೂರಸಂಪರ್ಕ ಮುಂತಾದ ವಿಚಾರಗಳ ಬಗ್ಗೆ ಹೇಳಲಾಗಿದೆ. ಭಾರತವು ಮಾಹಿತಿ ತಂತ್ರಜ್ಞಾನಕ್ಕೆ ತೆರೆದುಕೊಂಡ ಬಗೆ , ಮಾಹಿತಿ ತಂತ್ರಜ್ಞಾನದ ಉಪಯೋಗ ಪಡೆದುಕೊಂಡ ಕ್ಷೇತ್ರಗಳು, ನಗರಗಳ ಬೆಳವಣಿಗೆಯ ಪ್ರಾಮುಖ್ಯತೆಯೊಂದಿಗೆ ಭಾರತವು ಇನ್ನು ಬರೀ ಹಳ್ಳಿಗಳ ದೇಶವಾಗಿ ಉಳಿದಿಲ್ಲ ಎಂಬ ಅನಿವಾರ್ಯ ಸತ್ಯದ ವಿಷಯಗಳಿವೆ. ಜೊತೆಗೆ ಮೀಸಲಾತಿ, ಎಡಬಲ ಸಿದ್ಧಾಂತಗಳು, ಬಣಗಳು, ವಿಶೇಷ ಆರ್ಥಿಕ ವಲಯದ ಪರ ವಿರೋಧಗಳು, ಕಾರ್ಮಿಕ ಸಂಘಟನೆ, ವಿಶ್ವವಿದ್ಯಾಲಯಗಳಲ್ಲಿನ ರಾಜಕೀಯ ಚಟುವಟಿಕೆಗಳು ಮುಂತಾದ ಭಾವನಾತ್ಮಕ ಸಂಘರ್ಷಗಳನ್ನೊಳಗೊಂಡ ಮತ್ತು ಒಮ್ಮತವಿಲ್ಲದ ವಿಚಾರಗಳು ಚರ್ಚಿಸಲ್ಪಟ್ಟಿವೆ.

ನಾಲ್ಕನೆಯ ಭಾಗವು ಭಾರತದ ಬಹಳಷ್ಟು ಸಮಸ್ಯೆಗಳ ಪರಿಹಾರ, ಸಮರ್ಥ ನಿಭಾಯಿಸುವಿಕೆಯ ಉಪಾಯಗಳೊಂದಿಗೆ ಅಭಿವೃದ್ಧಿಯ ಗುರಿಯು ದೂರದಲ್ಲಿ ಇಲ್ಲ ಎಂಬ ಭಾವನೆಯನ್ನು ತುಂಬುತ್ತದೆ. ಇದು ಬಹುಮುಖ್ಯವಾಗಿ ಮಾಹಿತಿ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡು ಪ್ರಗತಿ ಹೊಂದಬಹುದು ಎಂದು ತಿಳಿಸಿಕೊಡುತ್ತದೆ. ಮಾಹಿತಿ ತಂತ್ರಜ್ಞಾನ ಎಂಬುದು ಬರೀ ವೈಭೋಗಕ್ಕಲ್ಲದೇ ಪ್ರತಿಯೊಂದಕ್ಕೂ ಪರಿಹಾರವಾಗಬಲ್ಲುದು ಎಂಬುದಕ್ಕೆ ಯಶಸ್ವಿ ’ಭೂಮಿ’ ಯೋಜನೆಯ ಉದಾಹರಣೆ ಕೊಡಲಾಗಿದೆ. ಪ್ರತಿಯೊಬ್ಬನಿಗೂ ನಿರ್ದಿಷ್ಟ ಗುರುತಿನ ಸಂಖ್ಯೆಯ (ನ್ಯಾಷನಲ್ ಐ.ಡಿ. ಸಿಸ್ಟಮ್) ಅನುಷ್ಠಾನ ಅತಿ ಅಗತ್ಯವಾಗಿ ಆಗಬೇಕಿದೆ ಎಂದು ತಿಳಿಸಿಕೊಡುತ್ತದೆ. ಇದು ಎಲ್ಲಾ ಯೋಜನೆಗಳೂ ಯಶಸ್ವಿಯಾಗಲು, ಯಾವ ಸಂಪನ್ಮೂಲವೂ ದುರುಪಯೋಗವಾಗದೇ ತಲುಪಬೇಕಾದವರನ್ನು ತಲುಪಲು, ಆರೋಗ್ಯ, ಕಾರ್ಮಿಕನಿಧಿ, ಪಿಂಚಣಿ ಮೊದಲಾದ ಸಾಮಾಜಿಕ ಭದ್ರತೆ ಒದಗಿಸಲು ಸಹಾಯಕಾರಿಯಾಗಬಲ್ಲುದು ಎಂಬುದನ್ನು ವಿವರಿಸಿದ್ದಾರೆ. ಪರಿಸರವನ್ನು ಕಾಯ್ದುಕೊಂದು, ವಿದ್ಯುತ್ ಮುಂತಾದ ಶಕ್ತಿ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಪಡೆದುಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಸೂತ್ರಗಳನ್ನು ಒದಗಿಸಲಾಗಿದೆ. ಎಲ್ಲಾ ಯೋಜನೆಗಳೂ ಪ್ರತಿ ಮೂಲೆಯ ಹಳ್ಳಿಯಲ್ಲಿನ ಪ್ರತಿಯೊಬ್ಬರಿಗೂ ತಲುಪಲು ಒಂದು ಸಮರ್ಥ ಜಾಲದ ಅವಶ್ಯಕತೆ, ದೇಶದ ಮೂಲೆಯಲ್ಲಿನ ಪ್ರತಿಭೆಗಳನ್ನೂ ಕೂಡ ಮುಖ್ಯವಾಹಿನಿಯಲ್ಲಿ ಗುರುತಿಸಿ ಬೆಳೆಸುವ ವಾತಾವರಣ, ಸರಿಯಾದ ಕಾರ್ಯನೀತಿಗಳ ಜಾರಿ ಇನ್ನಿತರ ಕೆಲಸಗಳಿಂದ ಭಾರತದ ಆರ್ಥಿಕತೆಯನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎಂಬ ಚಿಂತನೆಗಳಿವೆ.

ಇಡೀ ಪುಸ್ತಕವು ನೀಲೇಕಣೀಯವರ ಅಗಾಧ ಅಧ್ಯಯನ ಮತ್ತು ಅನನ್ಯ ಅನುಭವಗಳ ಫಲವಾಗಿ ಕಾಣುತ್ತದೆ. ಭಾರತದ ಕೊಳಕು, ಹುಳುಕುಗಳನ್ನು ಕೂಡ ದೂಷಣೆಯಲ್ಲದ ಧಾಟಿಯಲ್ಲಿ ಹೇಳಿರುವುದರಿಂದ ಓದಲು ಕಿರಿಕಿರಿಯಾಗುವುದಿಲ್ಲ. ಎಲ್ಲಾ ವಿಷಯಗಳನ್ನೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಿನ್ನೆಲೆಯಿಂದ ವಿಶ್ಲೇಷಿಸಲಾಗಿದ್ದು ಅದಕ್ಕೆ ಪರಿಹಾರಗಳೂ ಕೂಡ ಅದರಲ್ಲೇ ಇರುವುದನ್ನು ತೋರಿಸಲಾಗಿದೆ. ಒಟ್ಟಿನಲ್ಲಿ ಇಡೀ ಪುಸ್ತಕವು ಭಾರತ ಕೇಂದ್ರೀಕೃತವಾಗಿ ಎಲ್ಲಾ ವಿಷಯಗಳನ್ನೂ ಕೂಡ ಒಳಗೊಂಡಿದ್ದು ಒಂದು ಒಳ್ಳೆಯ ಅಧ್ಯಯನ ಸಾಮಗ್ರಿಯಾಗಬಲ್ಲುದು. ಆದರೆ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಜಾಗತೀಕರಣ ಮುಂತಾದವುಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮತ್ತು ನಗರ ಆಧಾರಿತ ದೃಷ್ಟಿಯಲ್ಲಿ ಯೋಚಿಸಿದ ನಿಟ್ಟಿನಲ್ಲಿ ದೇಶದ ಬಹು ಅಗತ್ಯ ಕೃಷಿ ಕ್ಶೇತ್ರದ ಬೆಳವಣಿಗೆ ಬಗ್ಗೆ ಹೆಚ್ಚು ಒತ್ತು ನೀಡಲಾಗಿಲ್ಲ ಮತ್ತು ಭಾರತದ ಸಾಂಸ್ಕೃತಿಕ ನೆಲೆಗಟ್ಟನ್ನಾಗಲೀ, ಭಾರತೀಯ ಭಾಷೆಗಳ ಉಳಿಕೆ, ಬೆಳವಣಿಗೆಯನ್ನಾಗಲೀ ಗಣನೆಗೆ ತೆಗೆದುಕೊಂಡಿಲ್ಲ ಎಂದು ಅನ್ನಿಸುತ್ತದಾದರೂ ಕೂಡ ಆ ವಿಷಯಗಳು ಈ ಪುಸ್ತಕದ ವ್ಯಾಪ್ತಿಯಿಂದ ಹೊರಗಿನವು ಎಂದುಕೊಳ್ಳಬಹುದು. ಖುದ್ದು ನೀಲೇಕಣೀಯವರೇ ತಮ್ಮ ಪುಸ್ತಕದ ಮೊದಲಿನಲ್ಲಿ ಹೇಳಿಕೊಂಡಂತೆ ೫೦೦ ಚಿಲ್ಲರೆ ಪುಟಗಳ ಈ ಪುಸ್ತಕ ಖಂಡಿತ ಸಿನೆಮಾ, ಕ್ರಿಕೆಟ್ ನಂತಹ ರಂಜನೆಯ ವಿಷಯಗಳನ್ನು ಅಪೇಕ್ಷೇಪಡುವವರಿಗೆ ಅಲ್ಲವಾಗಿದ್ದು ಓದಲು ಅಪಾರವಾದ ಆಸಕ್ತಿ, ತಾಳ್ಮೆ ಬೇಡುತ್ತದೆ.


ಆದರೆ ಈ ರಿಸೆಷನ್ ಸಮಯದಲ್ಲಿ ಜಾಗತಿಕ ಮಾರುಕಟ್ಟೆ, ಸೇವೆಯನ್ನೇ ನಂಬಿಕೊಂಡು ಅಭಿವೃದ್ಧಿ ಹೊಂದಬಹುದೆಂಬ ಭಾವನೆ ಇಟ್ಟುಕೊಂಡು ಇದನ್ನು ಓದಿ ಆಶಾಭಾವನೆ ತಳೆಯಬೇಕೋ ಅಥವಾ ನೀಲೇಕಣಿಯವರಿಗೂ ಇದರ ಅರಿವಿರಲಿಲ್ಲ ಎಂದು ವ್ಯಥೆ ಪಡಬೇಕೋ ಎಂಬ ತೀರ್ಮಾನ ಓದುಗನಿಗೆ ಬಿಟ್ಟದ್ದು.!


(ಮಾರ್ಚ್ ೨೯, ೨೦೦೯ ಕನ್ನಡ(ಸಾಪ್ತಾಹಿಕ) ಪ್ರಭದ ’ಇಂಗ್ಲೀಷ್ ರೀಡರ್’ ಅಂಕಣ ಕ್ಕೆ ಬರೆದದ್ದು. )

Tuesday, April 14, 2009

ಜಲಿಯನ್ ವಾಲಾ ಬಾಗ್ ಬಗ್ಗೆ ಡಾ. ಸ್ವಾಮೀಜಿ ಬರೆದದ್ದು

ಮೊನ್ನೆ ಬಿಡುಗಡೆಯಾದ ನನ್ನ ಹೊಸ ಪುಸ್ತಕ ಜಲಿಯನ್ ವಾಲಾ ಬಾಗ್ ಪುಸ್ತಕವನ್ನು ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿಯವರಿಗೆ ತಲುಪಿಸಿ, ಅವರ ಆಶೀರ್ವಾದ ಪಡೆದು ಬಂದಿದ್ದೆ. ಈ ಹಿಂದೆ ನಾನು ಬರೆದ ಪುಸ್ತಕಗಳ್ನೂ ಸಹ ಶ್ರೀಗಳವರಿಗೆ ತಲುಪಿಸಿದ್ದೆ. ಆಗೆಲ್ಲಾ ಪುಸ್ತಕಗಳು ಚನ್ನಾಗಿವೆ ಎಂದು ಆಶೀರ್ವದಿಸಿದ್ದರು. ಚಂದ್ರಯಾನ ಪುಸ್ತಕದ ನೂರು ಪ್ರತಿಗಳನ್ನು ತರಿಸಿಕೊಂಡು ತಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ತಿಗಳಿಗೆ ನೀಡಿದ್ದರು.
ಈಗ ಜಲಿಯನ್ ವಾಲಾ ಬಾಗ್ ಬಗ್ಗೆ ಗುರುಗಳು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಕೇವಲ ನನಗೊಬ್ಬನಿಗೆ ಮಾತ್ರವಲ್ಲ, ವಿಜಯ ಕರ್ನಾಟಕ ಪತ್ರಿಕೆಯ ತಮ್ಮ ಬಿಸಿಲು ಬೆಳದಿಂಗಳು ಕಾಲಂನಲ್ಲಿ ಈ ಪುಸ್ತಕದ ಬಗ್ಗೆ ಬರೆಯುವ ಮೂಲಕ ಎಲ್ಲರಿಗೂ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅವರು ಬರೆಯುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಈಗ ಬರೆದು ಆಶೀರ್ವದಿಸಿದ್ದಾರೆ. ಗುರುಗಳಿಗೆ ನಮಸ್ಕಾರಗಳು.
ಬಿಸಿಲು ಬೆಳದಿಂಗಳು ಅಂಕಣದಲ್ಲಿ ಗುರುಗಳು ಬರೆದದ್ದು ಇಲ್ಲಿದೆ. ಓದಿ ನಿಮ್ಮ ಅನಿಸಿಕೆ ತಿಳಿಸಿ. ಇದನ್ನು ದೊಡ್ಡದಾಗಿ ನೋಡಲು ಲೇಖನದ ಮೇಲೆ ಕ್ಲಿಕ್ ಮಾಡಿ.

Saturday, April 4, 2009

ಐವರು ಪತ್ರಕರ್ತರ ಪುಸ್ತಕಗಳ ಬಿಡುಗಡೆ

ಬೆಂಗಳೂರು ಪ್ರೆಸ್ ಕ್ಲಬ್ ಪ್ರಕಾಶನ ಹೊರ ತರುತ್ತಿರುವ ಐವರು ಪತ್ರಕರ್ತರ ಪುಸ್ತಕಗಳ ಬಿಡುಗಡೆ ಸಮಾರಂಭ ಇಂದು ಸಂಜೆ ೬ಗಂಟೆಗೆ ನಡೆಯಲಿದೆ.
ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಪುಸ್ತಕ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ, ಗ್ರಂಥಾಲಯ ಇಲಾಖೆ ನಿರ್ದೇಶಕ ಶಿವಾನಂದ ಬಿ.ಹೊಂಡದ ಕೇರಿ ಭಾಗವಹಿಸಲಿದ್ದಾರೆ.
ಬಿಡುಗಡೆಯಾಗಲಿರುವ ಪುಸ್ತಕಗಳು
ಎನ್.ಅರ್ಜುನ್‌ದೇವ - ಸ್ಕೂಪು ತೋಪಾಯಿತು
ಲಕ್ಷ್ಮಣ್ ಕೊಡಸೆ-ಅಜಲು
ಗುಡಿಹಳ್ಳಿ ನಾಗರಾಜ್‌-ರಂಗಸೆಲೆ
ಪಿ.ಪುಟ್ಟಸೋಮಾರಾಧ್ಯ-ಅಕ್ಕ-ಮೀರಾ
ಎಸ್.ಸಿ.ದಿನೇಶ್‌ಕುಮಾರ್‌- ದೇಸಿಮಾತು
ಸಮಾರಂಭದ ಅಂಗವಾಗಿ ಉಡುಪಿ ಜಿಲ್ಲೆಯ ಶ್ರೀ ಮಹಾಗಣಪತಿ ಆರ್ಟ್ ಆಂಡ್ ಕಲ್ಚರಲ್ ಫೌಂಡೇಶನ್ ಯಕ್ಷಗಾನ ಮಂಡಳಿಯ ಕಲಾವಿದ ಗೋಪಾಲಕೃಷ್ಣಭಟ್ ಅವರ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

Tuesday, February 24, 2009

ಸದ್ಭಾವ



ಕವಿ ಚೆನ್ನವೀರ ಕಣವಿಯವರ ಮುನ್ನುಡಿ, ಬೆನ್ನುಡಿಗಳನ್ನು ಹಾಗೂ ಕೆಲವು ಹಿರಿಯರು, ಕಿರಿಯರ ಕುರಿತಾದ ಸಾಂದರ್ಭಿಕವಾಗಿ ಬರೆದ ಲೇಖನಗಳನ್ನು ಒಳಗೊಂಡ ಸಂಗ್ರಹ ಇದು. ಈ ಮೊದಲು ಅವರ ಮುನ್ನುಡಿಗಳದೇ ಒಂದು ಸಂಗ್ರಹ `ಶುಭ ನುಡಿಯೆ ಹಕ್ಕಿ‘ ಪ್ರಕಟವಾಗಿತ್ತು.
ಸ.ಸ.ಮಾಳವಾಡ, ಬೆಟಗೇರಿ ಕೃಷ್ಣಶರ್ಮ, ಬಸವರಾಜ ಸಾದರ ಮುಂತಾದ ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಅಷ್ಟೇನೂ ಪ್ರಸಿದ್ಧರಲ್ಲದ ಲೇಖಕರಿಗೂ ಬೆನ್ನುತಟ್ಟಿ ಅವರು ಮುನ್ನುಡಿಗಳನ್ನು ಬರೆದಿರುವುದನ್ನು ನೋಡಬಹುದು.
ಇಲ್ಲಿ ಕುತೂಹಲಕಾರಿಯಾಗಿರುವುದು ಶೆ.ಗೋ.ಕುಲಕರ್ಣಿಯವರ `ನಾ ಕಂಡ ಗೆಳೆಯರ ಗುಂಪು‘ ಪುಸ್ತಕಕ್ಕೆ ಬರೆದ ಬೆನ್ನುಡಿ. ಈ ಪುಸ್ತಕ ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ. ಮೂರೂ ಸಂಪುಟಗಳಿಗೆ ಅವರು ಪ್ರತ್ಯೇಕ ಬೆನ್ನುಡಿಗಳನ್ನು ಬರೆದಿದ್ದಾರೆ. ತರುಣ ಬರಹಗಾರರಿಗೆ ಹಾರೈಕೆ, ಅಭಿನಂದನೆಗಳನ್ನು ಕಣವಿಯವರು ಮಾಡಿದ್ದಾರೆ. ಕೆಲವು ಹಿರಿಯ ಲೇಖಕರ ಕೃತಿಗಳಿಗೆ ಬರೆದ ಬೆನ್ನುಡಿ, ಮುನ್ನುಡಿಗಳನ್ನು ಹೊರತುಪಡಿಸಿದರೆ ಒಂದು ಕಾಲಘಟ್ಟದ ಸಾಹಿತ್ಯ ಸಂದರ್ಭವನ್ನು ಅರಿಯಲು ಈ ಪುಸ್ತಕ ಸಹಕಾರಿಯಾಗುವಂತಿದೆ.
`ವ್ಯಕ್ತಿ ಶಕ್ತಿ : ನನಗೆ ಕಂಡಷ್ಟು : ಭಾಗದಲ್ಲಿ ಜಿ. ನಾರಾಯಣ, ಚದುರಂಗ, ಗೊರೂರು ಮುಂತಾದವರ ವ್ಯಕ್ತಿತ್ವವನ್ನು ರೇಖಿಸಿದ್ದಾರೆ. ಸಂಕೀರ್ಣ ಭಾಗದಲ್ಲಿ ಮಧುರ ಚೆನ್ನರ ಕಾವ್ಯದ ಬಗ್ಗೆ, `ಜಾನಪದ ದೀಪಾರಾಧನೆ ಸಮಾರಂಭ‘ ಮುಂತಾದ ವಿಶೇಷ ಸಂಗತಿಗಳ ಬಗ್ಗೆ ಬರೆದಿದ್ದಾರೆ. ಇಲ್ಲಿ ಅವರ ಒಂದು ಅನುವಾದವೂ ಇದೆ. ಚೀನಾದ ತತ್ವಜ್ಞಾನಿ ಲಿನ್ ಯು ಟಾಂಗ್ ನ `ದಿ ಇಂಪಾರ್ಟನ್ಸ್ ಆಫ್ ಲಿವಿಂಗ್‘ ಎಂಬ ಪುಸ್ತಕದ ಕೆಲವು ಅಧ್ಯಾಯಗಳನ್ನು ಅನುವಾದ ಮಾಡಿದ್ದಾರೆ. ಈ ಅನುವಾದ ಸುಂದರವಾಗಿದೆ. ಇಲ್ಲಿ ಕಣವಿಯವರು ಬರೆದಿರುವ ಬಹುಪಾಲು ಲೇಖಕರು ಉತ್ತರ ಕರ್ನಾಟಕದವರು ಎನ್ನುವುದು ಕುತೂಹಲಕಾರ.
ಕಣವಿಯವರ ಶೈಲಿ ತಿಳಿನೀರಿನಂತೆ ಪಾರದರ್ಶಕವಾಗಿರುವಂಥದ್ದು. ಅದು ಅವರ ಎಂದಿನ `ಸದ್ಭಾವ‘ದಿಂದ ಇನ್ನಷ್ಟು ಕಳೆಗಟ್ಟಿದೆ.

ಶೀರ್ಷಿಕೆ: ಸದ್ಭಾವ ಲೇಖಕರು: ಚೆನ್ನವೀರ ಕಣವಿ ಪ್ರಕಾಶಕರು: ಸಂವಹನ ಪುಟಗಳು: 216 ಬೆಲೆ:ರೂ.150/-

ಕೃಪೆ : ಪ್ರಜಾವಾಣಿ

Saturday, February 7, 2009

ರವಿ ಬೆಳಗೆರೆ ‘ನೀನಾ ಪಾಕಿಸ್ತಾನ’ದಲ್ಲಿ ಜೆಹಾದ್‌ನ ನಾನಾ ಮುಖಗಳು…

ಗಮನಕ್ಕೆ: ಈ ಬರಹವನ್ನು ವಿಜಯ್ ಅವರ ಮನಸ್ಸಿನ ಮರ್ಮರ ಬ್ಲಾಗ್ ನಿಂದ ಎತ್ತಿಕೊಳ್ಳಲಾಗಿದೆ. ಅವರ ಬ್ಲಾಗ್ ಗೆ ಭೇಟಿ ಕೊಡಲು 'ಮನಸ್ಸಿನ ಮರ್ಮರ' ಇಲ್ಲಿ ಕ್ಲಿಕ್ ಮಾಡಿ
* * *



ಇದೊಂದು ಪುಸ್ತಕದ ಬಗ್ಗೆ ಹೇಳಿಕೊಂಡಷ್ಟು ರವಿ ಬೆಳಗೆರೆ ಇನ್ಯಾವ ಪುಸ್ತಕದ ಕುರಿತೂ ಹೇಳಿರಲಿಕ್ಕಿಲ್ಲ. ಈಗ ಕೊಡ್ತೀನಿ… ಆಮೇಲೆ ಕೊಡ್ತೀನಿ ಅಂತ ಸುಮಾರು ಆರೇಳು ವರ್ಷಗಳಲ್ಲಿ ಓದುಗರಲ್ಲಿ ಬೆಟ್ಟದಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದರು. ಕೊನೆಗೂ ಮೊನ್ನೆ ಗಣರಾಜ್ಯೋತ್ಸವದ ಮುನ್ನಾದಿನ ಗಜಗರ್ಭ ಪ್ರಸವವಾಯ್ತು. ಕಾದು ಕಾದು ಬೇಸರಗೊಂಡಿದ್ದ ಓದುಗ ದೊರೆಗಳ ಮುಖ ಪ್ರಸನ್ನವಾಯ್ತು. ಹಿಂದೊಮ್ಮೆ ತಮ್ಮ ಪತ್ರಿಕೆ ‘ಹಾಯ್ ಬೆಂಗಳೂರ್‘ನಲ್ಲಿ ‘ನೀನಾ ಪಾಕಿಸ್ತಾನ‘ ಮಾಲಿಕೆಯನ್ನು ಬೆಳಗೆರೆ ಶುರು ಮಾಡಿದ್ದರು. ಭುಟ್ಟೋ ಮರಣದಂಡನೆಯ ವಿವರಗಳೊಂದಿಗೆ ಪ್ರಾರಂಭವಾದ ಆ ಮಾಲಿಕೆ ಶುರುವಾದ ಕೆಲವೇ ದಿನಗಳಲ್ಲಿ ನಿಂತೂ ಹೋಗಿತ್ತು… ಓದುಗರ ನಿರೀಕ್ಷೆಯ ಕಾವಿಗೆ ಇನ್ನಷ್ಟು ತುಪ್ಪವನ್ನು ಸುರಿದು. ಇದೀಗ ಅಂತೂ ಇಂತೂ ಪುಸ್ತಕ ಹೊರಬಂದಿದೆ. ಪಾಕಿಸ್ತಾನದ ಪತ್ರಕರ್ತ ಅಮೀರ್ ಮೀರ್ ಕೃತಿಯನ್ನಾಧರಿಸಿದ ಈ ಪುಸ್ತಕ ಜೆಹಾದಿ ಜಗತ್ತಿನ ಒಳಹೊರಗುಗಳನ್ನು, ಧರ್ಮಾಂಧತೆಯ ಕರಾಳ ಮುಖಗಳನ್ನು ಅನಾವರಣಗೊಳಿಸಿದೆ.
ಇಪ್ಪತ್ತೊಂಬತ್ತು ಅಧ್ಯಾಯಗಳಲ್ಲಿ ಸವಿಸ್ತಾರವಾಗಿ ಜೆಹಾದಿಗಳ ಪ್ರಪಂಚದ ಮೂಲೆಮೂಲೆಯತ್ತ ಬೆಳಕು ಚೆಲ್ಲುವ ಈ ಕೃತಿಯ ಆರಂಭದಲ್ಲಿ ಬೆಳಗೆರೆ ಸವಿಸ್ತಾರವಾದ ಮುನ್ನುಡಿಯೊಂದರ ಮೂಲಕ ಧರ್ಮಯುದ್ಧದ ಅಂಗಳಕ್ಕೆ ಓದುಗರನ್ನು ಎಳೆತಂದು ನಿಲ್ಲಿಸುತ್ತಾರೆ. ಹುತಾತ್ಮ ಯೋಧ ಸಂದೀಪ್ ಉನ್ನಿಕೃಷ್ಣನ್‌ಗೆ ಸಮರ್ಪಿತವಾದ ಈ ಪುಸ್ತಕದ ಪ್ರತಿಯೊಂದು ಅಧ್ಯಾಯವೂ ಜೆಹಾದಿಗಳ ಕಪಿಮುಷ್ಟಿಯಲ್ಲಿರುವ ಪಾಕಿಸ್ತಾನದ ಚಿತ್ರಣವನ್ನು ಒಂದೊಂದಾಗಿ ಕಟ್ಟಿಕೊಡುತ್ತಾ ಹೋಗುತ್ತದೆ. ಐ.ಎಸ್.ಐ., ಅಲ್-ಕೈದಾ, ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೊಯಿಬಾ, ಹರ್ಕತುಲ್ ಮುಜಾಹಿದೀನ್, ಹಿಜ್ಬುಲ್ ಮುಜಾಹಿದೀನ್ ಹೀಗೆ ಬೇರೆಬೇರೆ ಹೆಸರಿನಲ್ಲಿ ಧರ್ಮಯುದ್ಧದ ನೆಪದಲ್ಲಿ ರಕ್ತದ ಕೋಡಿ ಹರಿಸುತ್ತಿರುವ ಸಂಘಟನೆಗಳ ಬಗ್ಗೆ ಇಂಚಿಂಚೂ ಬಿಡದೇ ಸಂಗ್ರಹಿಸಿ ಕೊಟ್ಟಿರುವ ಮಾಹಿತಿಯನ್ನು ಓದಿದಾಗ ಇದನ್ನು ಬರೆದು ದಕ್ಕಿಸಿಕೊಂಡಿರುವ ಪಾಕಿಸ್ತಾನಿ ಪತ್ರಕರ್ತನ ಯಮಗುಂಡಿಗೆಯ ಬಗ್ಗೆ ಮೆಚ್ಚುಗೆ ಬೆರೆತ ಆಶ್ಚರ್ಯ ಮೂಡದೇ ಇರದು. ಹಾಗೆಯೇ ಅದನ್ನು ಸಮರ್ಥವಾಗಿ ಕನ್ನಡಕ್ಕೆ ತಂದ ಬೆಳಗೆರೆಯ ಬರವಣಿಗೆಯ ಚಾತುರ್ಯ, ಶೈಲಿ ಕೂಡಾ ಇಷ್ಟವಾಗುತ್ತದೆ. ನೂರಾರು ಅಪರೂಪದ ಫೋಟೋಗಳು ಪುಟಪುಟಗಳ ಒಟ್ಟಂದಕ್ಕೆ ಇನ್ನಷ್ಟು ಕಳೆಕಟ್ಟುವಂತೆ ಮಾಡಿರುವುದು ಮಾತ್ರವಲ್ಲದೆ, ಅಲ್ಲಿನ ವಿವರಣೆಗೆ ಇನ್ನಷ್ಟು ಇಂಬು ಕೊಡುವಂತಿವೆ.
ಪಾಕಿಸ್ತಾನದ ಮುಸ್ಲಿಂ ಪಂಗಡಗಳ ಒಳಜಗಳಗಳು, ಐ.ಎಸ್.ಐ. ಮತ್ತು ಜೆಹಾದಿಗಳ ಬಿಗಿ ಹಿಡಿತದಲ್ಲಿರುವ ಪಾಕಿ ಸೈನ್ಯ, ಜೆಹಾದಿಗಳ ಹುಟ್ಟಿಗೆ ಅಮೇರಿಕ ಪರೋಕ್ಷವಾಗಿ ಹೇಗೆ ಕಾರಣವಾಯ್ತು, ಅಮೇರಿಕಾದ ಟ್ವಿನ್ ಟವರ್ ದಾಳಿಯ ನಂತರ ಅಮೇರಿಕಾದ ತಾಳಕ್ಕೆ ಅನಿವಾರ್ಯವಾಗಿ ಕುಣಿದ ಮುಷರಫ್ ಜೆಹಾದಿಗಳ ಪ್ರತಿರೋಧಕ್ಕೆ ಸಿಲುಕಿ ಅನುಭವಿಸಿದ ಪ್ರಾಣಭೀತಿ, ಕಂದಹಾರ್ ವಿಮಾನಾಪಹರಣ, ಡೇನಿಯಲ್ ಪರ್ಲ್ ಹತ್ಯೆ… ಹೀಗೆ ಜೆಹಾದಿಗಳ ಲೋಕದೊಳಗೆ ಒಂದು ಸುತ್ತು ತಿರುಗಿದಂತಹ ಅನುಭವವನ್ನು ಪುಸ್ತಕ ನೀಡುವುದಂತೂ ಖಂಡಿತ. ಹೀಗೆ ನಮ್ಮರಿವಿಗೆ ಬರದಂತೆ ಆ ಜಗತ್ತಿನಲ್ಲಿ ನಡೆಯುವ ಘಟನಾವಳಿಗಳು, ಆ ಘಟನೆಗಳಿಗೆ ಪ್ರತ್ಯಕ್ಷ-ಪರೋಕ್ಷ ಕಾರಣಗಳು, ಅದರ ಪರಿಣಾಮ ಇವೆಲ್ಲವನ್ನು ಕಣ್ಣಮುಂದೆಯೇ ನಡೆವಂತೆ ಚಿತ್ರಿಸಿದ ಪರಿ ನಿಜಕ್ಕೂ ಶ್ಲಾಘನೀಯ. ಪಾಕಿಸ್ತಾನದ ಮದರಸಾಗಳು ಹೇಗೆ ಜೆಹಾದಿಗಳ ಹುಟ್ಟಿಗೆ ಕಾರಣವಾಗುತ್ತವೆ, ಅಲ್ಲಿ ಎಳೆ ಕಂದಮ್ಮಗಳ ನಿಷ್ಕಲ್ಮಷ ಮನಸ್ಸಿನಲ್ಲಿ ಹೇಗೆ ಧರ್ಮದ್ವೇಷದ ವಿಷಬೀಜವನ್ನು ಬಿತ್ತಲಾಗುತ್ತದೆ, ಮುಂದೆ ಅವರನ್ನು ಹೇಗೆ ಜೀವಂತ ಬಾಂಬ್ ಆಗಿ ತರಬೇತುಗೊಳಿಸಿ ನಮ್ಮ ದೇಶದೊಳಕ್ಕೆ ಬಿಡಲಾಗುತ್ತದೆ ಅನ್ನುವ ವಿವರಗಳು ಬೆಚ್ಚಿಬೀಳಿಸುವಂತಿವೆ. ಒಸಾಮ, ದಾವೂದ್, ಮುಲ್ಲಾ ಉಮರ್ ಮೊದಲಾದವರು ಜೆಹಾದಿ ಜಗತ್ತಿನ ಮುಖಂಡರ ಜೊತೆ ಕೈಜೋಡಿಸಿ ಹೇಗೆ ಧರ್ಮದ್ವೇಷದ ಬೆಂಕಿಯಿಂದ ಜಗತ್ತಿನಾದ್ಯಂತ ಭಯೋತ್ಪಾದನೆಯ ಬಿಸಿ ಮುಟ್ಟಿಸುತ್ತಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಬೇಕಿದ್ದರೆ ನೀನಾ ಪಾಕಿಸ್ತಾನವನ್ನು ಒಮ್ಮೆ ತಪ್ಪದೇ ಓದಿ.
ತನ್ನ ವಿರೋಧಿಗಳನ್ನು ಹಣಿಯಲು ತಾನೇ ವಿಷದ ಹಾಲೂಡಿ ಬೆಳೆಸಿದ ಜೆಹಾದಿಗಳು, ಅಮೇರಿಕವನ್ನೇ ಕಚ್ಚಲು ಮುಂದಾದ ಬಳಿಕವಷ್ಟೇ ಅದು ಹೇಗೆ ಸುಭಗನಂತೆ ಪೋಸು ಕೊಡುತ್ತಾ ಭಯೋತ್ಪಾದನೆ ನಿರ್ಮೂಲನದ ಮಾತಾಡುತ್ತಿದೆಯೋ ನೋಡಿ. ಈಗ ಅವರು ಏನೇ ಬೊಬ್ಬೆ ಹೊಡೆದರೂ, ಪ್ರಾರಂಭದಲ್ಲಿ ರಷ್ಯನ್ನರನ್ನು ಹಣಿಯುವುದಷ್ಟೇ ಪರಮೋದ್ಧೇಶವನ್ನಾಗಿಸಿಕೊಂಡು ಭಯೋತ್ಪಾದನೆಗೆ ತೆರೆಮರೆಯಲ್ಲಿ ಬೆಂಬಲ ನೀಡಿದ್ದು, ಆ ಮೂಲಕ ಸಣ್ಣ ಪ್ರಮಾಣದಲ್ಲಿ ಸಕ್ರಿಯರಾಗಿದ್ದ ಜೆಹಾದಿಗಳು ಈ ಪ್ರಮಾಣದಲ್ಲಿ ಬೆಳೆದು ನಿಲ್ಲುವಲ್ಲಿ ಅಮೇರಿಕ ನಿರ್ವಹಿಸಿದ ಪಾತ್ರ - ಸುಸ್ಪಷ್ಟವಾಗಿ ಗೋಚರವಾಗುತ್ತದೆ. ಈಗ ಜೆಹಾದಿಗಳು ಯಾವ ಪರಿ ಬೆಳೆದು ನಿಂತಿದ್ದಾರೆಂದರೆ ಅಮೇರಿಕದ ಮಾತು ಹಾಗಿರಲಿ ಪಾಕಿಸ್ತಾನ ಸರ್ಕಾರದ ಮಾತನ್ನೇ ಅವರು ಕೇಳುವುದಿಲ್ಲ. ಜೆಹಾದಿಗಳು ಈ ಪರಿ ಹೆಚ್ಚಿಕೊಂಡಿರುವುದಕ್ಕೆ ಅಮೇರಿಕಾ ಅವರನ್ನು ಆ ಪರಿ ಹಚ್ಚಿಕೊಂಡಿದ್ದು ಹೇಗೆ ಕಾರಣವಾಯ್ತು ಅನ್ನುವುದರ ಬಗ್ಗೆ ಭರಪೂರ ಮಾಹಿತಿ ಪುಸ್ತಕದುದ್ದಕ್ಕೂ ಸಿಗುತ್ತದೆ. ಪುಸ್ತಕದಲ್ಲಿರುವ ವಿವರಣೆ, ಅದು ಕಟ್ಟಿಕೊಡುವ ಅಪರೂಪದ ಮಾಹಿತಿಗಳ ಅಗಾಧತೆ, ಅಪರೂಪದ ಫೋಟೋಗಳು ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಇದೊಂದು ಸಂಗ್ರಹಯೋಗ್ಯ ಪುಸ್ತಕವೆನ್ನುವುದರಲ್ಲಿ ಎರಡು ಮಾತಿಲ್ಲ.
ಆದರೂ ನನ್ನ ಮಟ್ಟಿಗೆ ಹೇಳುವುದಾದರೆ ಈ ಪುಸ್ತಕದಿಂದ ನಾನು ನಿರೀಕ್ಷಿಸಿದ್ದು ನನಗೆ ಸಂಪೂರ್ಣವಾಗಿ ಸಿಗಲಿಲ್ಲವೆಂದೇ ಹೇಳಬೇಕು. ‘ಹಾಯ್‘ನಲ್ಲಿ ಬಂದ ಕೆಲವು ಅಧ್ಯಾಯಗಳನ್ನು ಓದಿದ ನಂತರ ಈ ಪುಸ್ತಕದ ಬಗ್ಗೆ ನನ್ನ ನಿರೀಕ್ಷೆಗಳು ಬೇರೆಯೇ ಇದ್ದವು. ದೇಶ ವಿಭಜನೆಯ ಬಳಿಕ ಪಾಕಿಸ್ತಾನವೆಂಬ ನಮ್ಮ ನೆರೆಯ ರಾಷ್ಟ್ರದಲ್ಲಾದ ಸಮಗ್ರ ಘಟನಾವಳಿಗಳು, ಭಾರತ ಪಾಕಿಸ್ತಾನ ಯುದ್ಧಗಳ ಇತಿಹಾಸ, ಸೈನ್ಯಾಧಿಕಾರಿಗಳ ಸರ್ವಾಧಿಕಾರದಲ್ಲಿ ಆಳಿಸಿಕೊಂಡ ಪಾಕಿಸ್ತಾನ, ಭಾರತದ ಕುರಿತು ಅಲ್ಲಿನ ಜನಸಾಮಾನ್ಯರಲ್ಲಿ ಇರುವ ನೈಜ ಅಭಿಪ್ರಾಯ, ಆರ್ಥಿಕ ಸಂಕಷ್ಟಗಳ ಅಡಿಯಲ್ಲೂ ಅಡಗದ ಅವರ ರಣೋತ್ಸಾಹ… ಹೀಗೆ ಪಾಕಿಸ್ತಾನದ ಸಮಗ್ರ ಚಿತ್ರಣವೊಂದನ್ನು ನಾನು ನಿರೀಕ್ಷಿಸಿದ್ದೆ. ಬಹುತೇಕ ಜೆಹಾದಿಗಳ ಜಗತ್ತಿನ ಸುತ್ತಲೇ ಸುತ್ತುವ ಪುಸ್ತಕದ ವಿವರಣೆಗಳು ಆ ಜಗತ್ತಿನ ಕರಾಳತೆ, ನಿಗೂಢತೆಯನ್ನು ಸಮಗ್ರವಾಗಿ ಪರಿಚಯಿಸುತ್ತದಾದರೂ ಪುಸ್ತಕದಲ್ಲಿನ ಘಟನೆಗಳು ಪಾಕಿಸ್ತಾನದ ಇತ್ತೀಚಿನ ಇತಿಹಾಸದ ಸುತ್ತಲಷ್ಟೇ ಗಿರಕಿ ಹೊಡೆಯುತ್ತವೆ. ಹಾಗಾಗಿ ಸಮಗ್ರ ಇತಿಹಾಸದ ಚಿತ್ರಣದ ನಿರೀಕ್ಷೆಯಿಟ್ಟುಕೊಂಡ ನನಗೆ ಸ್ವಲ್ಪ ಮಟ್ಟಿಗೆ ನಿರಾಸೆಯಾಗಿದ್ದು ಸುಳ್ಳಲ್ಲ. ಬಹುಶಃ ಅಮಿರ್ ಮೀರ್ ಕೃತಿಯ ವ್ಯಾಪ್ತಿಗಷ್ಟೇ ಪುಸ್ತಕ ಸೀಮಿತಗೊಳ್ಳಬೇಕಾದ ಅನುವಾದಕರ ಅಸಹಾಯಕತೆಯೂ ಇದಕ್ಕೆ ಕಾರಣವಿರಬಹುದು. ಏನೇ ಇರಲಿ, ಪ್ರಸ್ತುತ ಪುಸ್ತಕ ಹೊರತರುತ್ತಿರುವ ಬೆಳಗೆರೆಯ ವೇಗವನ್ನು ಗಮನಿಸಿದರೆ, ಅಂತಹ ಪುಸ್ತಕವೊಂದು ಸಧ್ಯದಲ್ಲೇ ನಮ್ಮ ಕೈ ಸೇರಿದರೂ ಆಶ್ಚರ್ಯಪಡಬೇಕಾಗಿಲ್ಲ ಅನ್ನುವುದು ನನ್ನ ಆಶಾವಾದ.


ಪುಸ್ತಕ : ನೀನಾ ಪಾಕಿಸ್ತಾನ

ಮೂಲ : ಅಮೀರ್ ಮೀರ್

ಅನುವಾದ : ರವಿ ಬೆಳಗೆರೆ

ಪುಟಗಳು : 277+26

ಪ್ರಕಾಶನ : ಭಾವನಾ ಪ್ರಕಾಶನ

ಬೆಲೆ : 150 ರೂ.

Wednesday, February 4, 2009

ಕಣ್ಣ ಕಣಿವೆಗೆ ಎಚ್.ಎಸ್. ಶಿವ ಪ್ರಕಾಶ್ ಅವರು ಬರೆದ ಮುನ್ನುಡಿ


ಶ್ರೀಮತಿ ರೇಣುಕಾ ನಿಡುಗುಂದಿ ಅವರ ಚೊಚ್ಚಿಲು ಕವಿತಾಸಂಗ್ರಹಕ್ಕೆ ಮುನ್ನುಡಿ ಬರೆದುಕೊಡಿ ಎಂದು ದೆಹಲಿ ಕನ್ನಡ ಸಂಘದ ಅಧ್ಯಕ್ಷ ಡಾ. ಬಿಳಿಮಲೆ ಅವರು ಸ್ನೇಹಪೂರ್ವಕ ಆಗ್ರಹ ಮಾಡುತ್ತಿದ್ದಾರೆ. ಸ್ವತಃ ಬರಹಗಾರ್ತಿಯವರು ಅವರ ಮಾತಿಗೆ ದನಿಗೂಡಿಸಿದ್ದಾರೆ. ಒಲ್ಲೆ ಅನ್ನಲಾಗದೆ ಈ ಕೆಲವು ಮಾತುಗಳನ್ನು ಬರೆಯತೊಡಗಿದ್ದೇನೆ.
ಮುನ್ನುಡಿ ಆಶೀರ್ವಚನಗಳಿಂದ ಯಾವ ಕವಿಯೂ ಉಧ್ಧಾರವಾಗುವುದಿಲ್ಲ ಅಂತ ನನಗೆ ಗೊತ್ತಿದೆ. ಕವಿತೆ ತನ್ನನ್ನು ತಾನೇ ಕಾಯ್ದುಕೊಳ್ಳಬೇಕು ನಮ್ಮ ಗದ್ಯಮಯ ಯುಗದಲ್ಲಿ. ಕವಿತೆಗೆ ಬದ್ಧರಾದವರಿಗೆ ಭೌತಿಕವಾಗಿ ಇವೊತ್ತು ಸಿಕ್ಕೋದು ಅಷ್ಟಕ್ಕಷ್ಟೆ: ಚೂರುಪಾರು ತಾರೀಫು, ಅಪರೂಪಕ್ಕೆ ವಿಮರ್ಶಕರ ಮೆಚ್ಚುಮಾತು, ಲಾಬಿ ಮಾಡುವವರಿದ್ದರೆ ಯಾವುದೋ ಜುಜುಬಿ ಅಕಾಡೆಮಿ ಬಹುಮಾನ ಪ್ರಶಸ್ತಿ. ರಶ್ಯನ್ ಕವಯತ್ರಿ ಅನಾ ಅಖಮತೋವಾ ಕವಿತೆಯನ್ನು 'ಕೃತಘ್ಞ ಕಲೆ' ಅಂತ ಕರೆದಿದ್ದಳು. ಆ ಮಾತು ಎಂದಿಗಿಂತಲೂ ಇಂದು ನಿಜ.
ಹೀಗಾಗಿ ಕವಿತೆ ಅನ್ನೋದು ಇವೊತ್ತು ಅಂಥಾ ಫಾಯಿದೆ ತರುವ ಕೆಲಸವಲ್ಲ. ನಮ್ಮ ಜರೂರಿಗಾಗಿ ನಾವೇ ಕಟ್ಟಿಕೊಂಡ ಆಸೆಯ ಕನಸುಗಳ ಕಟ್ಟಡ, ಅಷ್ಟೆ. ಹೀಗೆ ನಮ್ಮ ಜರೂರಿಗಾಗಿ ನಾವೇ ಸೃಜಿಸಿದ್ದು ಇನ್ನೊಬ್ಬ ಸಹೃದಯನಿ/ಳಿಗೆ ತನ್ನದೆನಿಸಿದರೆ ಅದೇ ಅದರ ಸಾರ್ಥಕತೆ.
ಕಳೆದ ಕೆಲವು ದಶಕಗಳಲ್ಲಿ ಕನ್ನಡ ಕಾವ್ಯದಲ್ಲಿ ನನಗೆ ಹೊಸಾ ತೆರಪುಗಳು ಕಾಣುತ್ತಿರುವುದು ಹೆಂಗಸರು ಬರೆದ ಕಾವ್ಯದಲ್ಲಿ. ಇಲ್ಲಿ ನಾನು ಸಾಧ್ಯತೆಗಳ ಬಗ್ಗೆ ಮಾತಾಡುತ್ತಿದ್ದೇನೆಯೇ ಹೊರತು ಸಿಧ್ಧಿಯ ಬಗ್ಗೆ ಅಲ್ಲ.. ಯಾಕೆಂದರೆ ಕಾವ್ಯದ ಗಂಡು ಸಾಧ್ಯತೆಗಳು ಎಂದೋ ಬರಡಾಗಿ ಹೋಗಿವೆ. ಅದ್ದರಿಂದಲೆ ಏನೋ ಕಳೆದ ಕೆಲವು ದಶಕಗಳ ಕನ್ನಡ ಕವಿತೆಯ ಚಿರಂತನ ಸಾಲುಗಳು ಹೆಂಗರುಳಿನವಾಗಿವೆಯೇ ಹೊರತು ಗಂಡುಮೆಟ್ಟಿನವಾಗಿಲ್ಲ. ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಹೆಂಗಸರು ಕಾವ್ವ ರಚನೆಗೆ ತೊಡಗುತ್ತಿದ್ದಾರೆ. ಗಂಡು ಪೂರ್ವಾಗ್ರಹಗಳನ್ನು ಬುಡಸಮೇತ ಹಿಡಿದು ಅಲ್ಲಾಡಿಸುವ, ಹೆಂಬಯಕೆಗಳನ್ನು ಒಮ್ಮೆ ಮೆಲುದನಿಯಲ್ಲಿ ಒಮ್ಮೆ ಕಠೋರವಾಗಿ ಕೇಳಿಸಿಕೊಳ್ಳುವಂತೆ ಮಾಡುವ ಕವಿತೆಗಳು ಈ ಅವಧಿಯಲ್ಲಿ ಗಮನಾರ್ಹವಾಗಿ ಬಂದಿವೆ. ಕನ್ನಡ ಕಾವ್ಯದ ಕೊನೆಯ ವಿದ್ಯಾರ್ಥಿಯಾಗಿ ನಾನೂ ಅದರಿಂದ ಬಹಳ ಕಲಿತಿದ್ದೇನೆ. ಈ ಚೌಕಟ್ಟಿನಲ್ಲಿ ರೇಣುಕಾ ಅವರ ಕವಿತೆಗಳನ್ನು ಕೆಲವು ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇನೆ.
ಶ್ರೀಮತಿ ರೇಣುಕಾ ನಿಡಗುಂದಿ ಅವರ ಕವಿತೆಗಳಿಗೆ ಪ್ರವೇಶಿಕೆಯಾಗಿ ಈ ಕೆಳಗಿನ ಸಾಲುಗಳನ್ನು ಉದಾಹರಿಸುತ್ತಿದ್ದೇನೆ.

1)
ನೀನಗಲುವ ಮುನ್ನ ನನ್ನ ಅಂತಿಮ
ಯಾತ್ರೆಯಾಗಬಾರದಿತ್ತೆ ?
ಸಾವಿರಾರು ಜನ ನರಳುವ ಬದಲು
ನಾನೊಬ್ಬಳೇ ಆ ಭೋಪಾಲದ
ಭೀಕರತೆಗೆ ಸಿಗಬೇಕಿತ್ತು.
(ವೈರುಧ್ಯ)

2)
ಹಗಲ ಹೆತ್ತ ಮುಗಿಲು ಇನ್ನೂ ಹಸೀ ಬಾಣಂತಿ
ಎಳೆ ಎಳೆ ಬಿಸಿಲಿಗೆ ಮೈ ಕಾಸಿಕೊಳ್ಳುತ್ತಿದೆ.
(ಬೆಳಕು ಬಿತ್ತುವ ಕಾಲ)

ಈ ರೀತಿಯ ಸಾಲುಗಳು ಶ್ರೀಮತಿ.ರೇಣುಕಾ ನಿಡಗುಂದಿ ಅವರ ಕಾವ್ಯ ಸಾಮಥ್ರ್ಯದ ಮುಕುರಗಳಾಗಿವೆ. ಆದರೆ ಇಂಥ ಸಾರ್ಥಕತೆ ಎಲ್ಲ ಕವಿತೆಗಳಲ್ಲೂ ಸಮಾನವಾಗಿ ಸಂಭವಿಸುತ್ತದೆ ಎಂದಲ್ಲ. ಕಾವ್ಯಭéಾಷೆಯನ್ನು ಶಿಸ್ತುಬದ್ಧವಾಗಿ ಅಭ್ಯಾಸ ಮಾಡಿದ ಕವಿಯತ್ರಿ ಅವರಲ್ಲ. ಸಹಜ ಪ್ರತಿಭೆಯ ಸೆಳೆತದಿಂದ ಕಾವ್ಯದ ದಂಡೆಗೆ ಬಂದವರು. ಯಾವಾಗ ಭಾಷೆಯ ಎಚ್ಚರ ಮತ್ತು ತೀವ್ರತೆ ಕೈಕೊಡುತ್ತದೋ ಆವಾಗ ಅವರು 'ಪ್ರಕೃತಿ ಪ್ರಣಯ'ದಂಥ ಕವಿತೆಗಳನ್ನು ಬರೆದುಬಿಡುತ್ತಾರೆ. ಹಾಗಲ್ಲದ ಒಳ್ಳೆ ರಚನೆಗಳಲ್ಲೂ ಕೂಡ ಹಂಸಲೇಖಾಮಯ ಕ್ಲೀಷಾ ಪ್ರಪಂಚದ ಹಾಲು, ಚಂದಿರ, ಮಧು, ಜೀವನಪ್ರೀತಿ ಇತ್ಯಾದಿ ಸವಕಲು ಪ್ರತಿಮೆಗಳು ಕವಿತೆಯೊಳಗೆ ನುಸುಳಿಕೊಂಡು ಬಿಡುತ್ತವೆ. ಆದರೆ ಬಹುಪಾಲು ಕವಿತೆಗಳಲ್ಲಿ ಹಾಗಾಗುವುದಿಲ್ಲ. ಭಾವದ ಉತ್ಕಟತೆಯಿಂದಲೋ ಪ್ರತಿಭೆಯ ಪ್ರಭಾವದಿಂದಲೋ ಸಹಜವಾಗಿ ಕಾಣುವ ಈ ಕವಿತೆಗಳು ಸ್ವಯಂಪೂರ್ಣವಾದ ರೂಪಗಳನ್ನು ತಾಳಿ ಬರುತ್ತವೆ.
ಉದಾ : 'ನಾವಿಬ್ಬರೂ ನಮಗೊಂದೆ' ಕವಿತೆಯ ಪ್ರತಿಮಾ ಪ್ರಧಾನತೆ ; 'ನಿನ್ನ ನೆನಪು', 'ಜೋಡು ದೀಪ' ಕವಿತೆಗಳ ಭಾವಗೀತಾತ್ಮಕತೆ ; 'ನೀನಾದ ನಿನಾದ' ಮತ್ತು 'ಅಂತರ್ಯ' ಕವಿತೆಗಳ ಗುಂಗುಂನಾದ ; ಇದಕ್ಕಿಂತಲೂ ಮುಖ್ಯವಾಗಿ 'ಚಂದ್ರ ಮತ್ತು ಬುದ್ಧಪೂಣರ್ಿಮೆ', 'ಹಾರಿಹೋದ ಹಕ್ಕಿಗಳು' ಮತ್ತು ಬೆಳಕು ಬಿತ್ತುವ ಕಾಲ ಇತ್ಯಾದಿ ಕೊನೆಯ ಕವಿತೆಗಳ ಆತ್ಮ ನಿವೇದಾತ್ಮಕತೆ ಮತ್ತು ವ್ಯಾಪಕತೆ- ಇಷ್ಟೊಂದು ಕಾವ್ಯ ಸಾಧ್ಯತೆಗಳು ಮೊದಲ ಕವಿತಾ ಗುಚ್ಛದಲ್ಲೇ ಚಲ್ಲವರಿಯುವುದು ಯಾವುದೇ ಚೊಚ್ಚಿಲು ಸಂಕಲನದಲ್ಲಿ ತೀರಾ ಅಪರೂಪದ ಮಾತು. ಆದ್ದರಿಂದ ರೇಣುಕಾ ಅವರ ಕವನಗಳು ಅಭಿನಂದನೀಯ.
ಪ್ರಾಚೀನ ತಮಿಳು ಕಾವ್ಯ ಮೀಮಾಂಸೆ ಕಾವ್ಯದ ಎರಡು ತುದಿಗಳನ್ನು ಗುರುತಿಸಿತ್ತು. ಹೆಂಗಸಿನ ಜಗತ್ತಿನ ಒಳ ಕವಿತೆಯನ್ನು ಅಗಂ ಎಂದೂ, ಗಂಡು ತುರ್ತುಗಳ ಹೊರ ಕವಿತೆಯನ್ನು ಪುರಂ ಎಂದೂ ಕರೆಯಿತು. ಆದರೆ ಹಾಗೆ ಮಾಡಿದ್ದು ಬಿಚ್ಚು ನೋಟದ ಸಲೀಸಿಗಾಗಿ. ಒಳ ಕವಿತೆ ಹೊರ ತುರ್ತುಗಳಲ್ಲಿ ಮೈದಾಳದೇ ಹೋದರೆ, ಅಥವಾ ಹೊರಗವಿತೆ ಒಳ ತುಡಿತಗಳಿಂದ ಮಿಡಿಯದೇ ಹೋದರೆ ಕವಿತೆಯ ಜೀವ ದೇಹಗಳು ಒಂದಾಗುವುದಿಲ್ಲ. ಇತ್ತಿತ್ತಲಾಗಿನ ಕನ್ನಡ ಕಾವ್ಯದ ತೊಂದರೆ ಇರುವುದು ಇಲ್ಲಿಯೆ. ಕೆಲವು ಸಲ ಗೊಣಗುಡುವಿಕೆಯಾಗಿ ಇನ್ನು ಕೆಲವು ಸಲ ಅಬ್ಬರವಾಗಿ ಕವಿತೆ ಸೋತು ಬಿಡುತ್ತದೆ. ಆದರೆ ಶ್ರೀಮತಿ ರೇಣುಕಾ ಅವರು ಒಳ -ಹೊರಗುಗಳಿಂದನ್ನೂ ಕವಿತೆಯ ನೇಯ್ಗೆ ಒಳಗೆ ಹೆಣೆಯುತ್ತಿರುವುದರಿಂದ ಅವರು ತಮ್ಮ ಕಾವ್ಯಯಾತ್ರೆಯನ್ನು ಸರಿಯಾದ ರೀತಿಯಲ್ಲೇ ಶುರು ಮಾಡಿದ್ದಾರೆ ಎಂದು ನನ್ನ ನಂಬುಗೆ.
ಆದ್ದರಿಂದ ಅವರು ಕನ್ನಡ ಕಾವ್ಯದ ಮಂಡೆಗೆ ಹೂವು ತರುವರೇ ಹೊರತು ಹುಲ್ಲು ತರುವರಲ್ಲ.

- ಎಚ್ ಎಸ್ ಶಿವಪ್ರಕಾಶ

Sunday, February 1, 2009

ಬಿಳಿಮಲೆಯವರ ಜನ ಸಂಸ್ಕೃತಿ


ಡಾ. ಪುರುಷೋತ್ತಮ ಬಿಳಿಮಲೆಯವರು ನಮ್ಮ ನಡುವೆ ಇರುವ ಒಬ್ಬ ಸೂಕ್ಮ ಮನಸ್ಸಿನ, ಜಾನಪದ ವಿದ್ವಾಂಸರು. ಉತ್ತಮ ಆಡಳಿತಗಾರರೂ, ಸಂಘಟಕರೂ ಹೌದು ಎಂಬುದನ್ನು ಅವರು ದೆಹಲಿ ಕರ್ನಾಟಕ ಸಂಘವನ್ನು ನಡೆಸಿಕೊಂಡು, ಒಂದು ಹಂತಕ್ಕೆ ತಂದದ್ದೇ ಸಾಕ್ಷಿ. ಬಿಳಿಮಲೆಯವರ 'ಜನ ಸಂಸ್ಕೃತಿ' ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಜನ ಸಂಸ್ಕೃತಿ ಪುಸ್ತಕದ ವಿಮರ್ಶೆ 'ಪ್ರಜಾವಾಣಿ'ಯಲ್ಲಿ ಪ್ರಕಟವಾಗಿದೆ.
ಅದನ್ನೇ ಯಥಾವತ್ ಇಲ್ಲಿ ಪ್ರಕಟಿಸಲಾಗಿದೆ.

(ವಿಮರ್ಶೆ ದೊಡ್ಡ ಪುಟದಲ್ಲಿ ನೋಡಲು, ಅದರ ಮೇಲೆ ಕ್ಲಿಕ್ ಮಾಡಿ.)

Saturday, January 31, 2009

ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ

ಜಿ ಎನ್‌ ಮೋಹನ್‌ರ ‘ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ’ ಪುಸ್ತಕಕ್ಕೆ ಈ ಸಲದ ಪುತಿನ ಕಾವ್ಯಪ್ರಶಸ್ತಿ ಬಂದಿದ್ದು ನಿಮಗೆ ಗೊತ್ತು. ನಿನ್ನೆ(ಬುಧವಾರ) ಸಂಜೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿತ್ತು. ಬೆಂಗಳೂರಿನ ವರ್ಲ್ಡ್‌ಕಲ್ಚರ್‌ ಇನ್ಸಿಟ್ಯೂಟ್‌ನಲ್ಲಿ ಸನ್ಮಾನದ ಜತೆಗೆ ಪುಸ್ತಕದ ಎರಡನೇ ಆವೃತ್ತಿಯ ಬಿಡುಗಡೆಯೂ ಆಯಿತು. ಪದ್ಯದ ಪುಸ್ತಕ ಎರಡನೇ ಆವೃತ್ತಿ ಕಂಡ ಸಡಗರದಲ್ಲಿ ಮುಖಪುಟವನ್ನು ಕೊಂಚ ಹೊಸದಾಗಿಸಲಾಗಿದೆ. ಹೊಸ ಹಳೆಯ ಎರಡೂ ವಿನ್ಯಾಸ ಇಲ್ಲಿವೆ. ನಿಮಗೇನನ್ನಿಸಿತು ಹೇಳಿ. ಅದೇ ಹೊತ್ತಿನಲ್ಲಿ ಮೇಫ್ಲವರ್ ಅಲ್ಲಿ ಬಂದಿದ್ದ ಎಲ್ಲರಿಗೂ ಪುತಿನರ ನೆನಪಿನ ಶುಭಾಶಯಪತ್ರವನ್ನು ಉಚಿತವಾಗಿ ವಿತರಿಸಿತು. ಆ ಚಿತ್ರವೂ ಕೆಳಗಿದೆ.
ಮೋಹನ್‌ಗೆ ಅಭಿನಂದನೆಗಳು.
(ಅಪಾರನಿಂದ ಕಡ ತಂದದ್ದು)


Wednesday, January 28, 2009

ಕಲಾಂರಿಂದ ಚಂದ್ರಯಾನ ಪುಸ್ತಕ ಬಿಡುಗಡೆ


ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಚಂದ್ರಯಾನ ಪುಸ್ತಕವನ್ನು ನವದೆಹಲಿಯಲ್ಲಿ ಜನವರಿ 27 ರಂದು ಬಿಡುಗಡೆ ಮಾಡಿದರು. ದಿ ವೀಕ್ ರೆಸಿಡೆಂಟ್ ಎಡಿಟರ್ ಸಚ್ಚಿದಾನಂದ ಮೂರ್ತಿ ಹಾಗೂ ಶಿವಪ್ರಸಾದ್ ಉಪಸ್ಥಿತರಿದ್ದಾರೆ.



ನವದೆಹಲಿ, ಜ. 27: ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು 1860 ರಷ್ಟು ಹಿಂದೆಯೇ ಕಾನ್ಸ್ಟಾಂಟಿನ್ ಟಿಶೆಲ್ಸ್ ಎಂಬ ವ್ಯಕ್ತಿ ನಿಖರವಾಗಿ ಊಹಿಸಿ ಹೇಳಿದ್ದ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಇಂದು ಇಲ್ಲಿ ಹೇಳಿದರು.
ಅವರು, ಪತ್ರಕರ್ತ ಶಿವಪ್ರಸಾದ್ ಬರೆದಿರುವ ಚಂದ್ರಯಾನ ಪುಸ್ತಕವನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಕಾನ್ಸ್ಟಾಂಟಿನ್ ಕಿವುಡನಾಗಿದ್ದ. ಆದರೆ ಅಧ್ಯಯನದಲ್ಲಿ ಅತೀವ ಆಸಕ್ತಿ ಹೊಂದಿದ್ದ. ತನ್ನ ಅಧ್ಯಯನದಿಂದ ವಿವಿಧ ಸಮೀಕರಣಗಳನ್ನು ರಚಿಸಿದ್ದ. ಆ ಮೂಲಕ ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು ತಿಳಿಸಿದ್ದ. ಇಂದು ಆತನ ಊಹೆ ನಿಜವಾಗಿದೆ. ನಾವು ಚಂದ್ರನ ಮೇಲೆ ಹೊಗಿ ಬಂದಿದ್ದೇವೆ. ಹೀಗಾಗಿ ಚಂದ್ರಯಾನದ ಕಲ್ಪನೆಯ ಜನಕ ಕನ್ಸ್ಟಾಂಟಿನ್ ಎಂದರು.
ಪುಸ್ತಕ ಬಿಡುಗಡೆ ಮಾಡಿದ ನಂತರ ಪ್ರಥಮ ಪ್ರತಿಯನ್ನು ದಿ ವೀಕ್ ನ ಸ್ಥಾನಿಕ ಸಂಪಾದಕರಾದ ಕೆ.ಎಸ್. ಸಚ್ಚಿದಾನಂದ ಮೂರ್ತಿ ಅವರಿಗೆ ನೀಡಿದರು. ನಂತರ ಪುಸ್ತಕದಲ್ಲಿನ ವಿವಿಧ ಅಧ್ಯಾಯಗಳ ಬಗ್ಗೆ ಮಾಹಿತಿ ಪಡೆದರು.
ಚಂದ್ರಯಾನ ಉಡ್ಡಯನದ ನಂತರ ಅಮೇರಿಕಾದ ನಾಸಾ, ಒಬಾಮಾ ನೀಡಿದ್ದ ಪ್ರತಿಕ್ರಿಯೆ ಹಾಗೂ ಆ ಬಗ್ಗೆ ಮಾಧವನ್ ನಾಯರ್ ನೀಡಿದ್ದ ವಿವರಣೆ ಇರುವ ಅಧ್ಯಾಯವನ್ನು ಲೇಖಕ ಶಿವಪ್ರಸಾದ್ ಅವರಿಂದ ಓದಿಸಿ, ವಿವರಣೆ ಪಡೆದರು.
ನಂತರ ಮತ್ತೋರ್ವ ಪತ್ರಕರ್ತ ವಿನಾಯಕ್ ಭಟ್ ಬರೆದಿದ್ದ ದಿ ಗ್ರೇಟ್ ಮೂನ್ ಹೋಕ್ಸ್-1835 ಅಧ್ಯಾಯದ ಬಗ್ಗೆಯೂ ವಿವರಣೆ ಪಡೆದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿನಾಯಕ್ ಭಟ್ ಅವರಿಗೆ ಅವರ ಲೇಖನದಲ್ಲಿದ್ದ ಫೋಟೋ ತೋರಿಸಿ, ಈ ಬಗ್ಗೆ ವಿವರಣೆ ಕೇಳಿ ಆನಂದಿಸಿದರು.
'ಚಂದ್ರಯಾನ ಪುಸ್ತಕ ಬರೆಯಲು ಒಂದು ವರ್ಷ ತೆಗೆದುಕೊಂಡಿದ್ದೀರಿ. ಐತಿಹಾಸಿಕ ಯೋಜನೆಯಾದ ಚಂದ್ರಯಾನ ಕುರಿತ ಸಮಗ್ರ ವಿವರ ಇರುವ ಪುಸ್ತಕವನ್ನು ಹೊರ ತಂದಿರುವುದು ಉತ್ತಮ ಪ್ರಯತ್ನ' ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ 'ಪ್ರಜಾವಾಣಿ' ವಿಶೇಷ ಪ್ರತಿನಿಧಿ ದಿನೇಶ್ ಅಮಿನ್ ಮಟ್ಟು, 'ಡೆಕ್ಕನ್ ಹೆರಾಲ್ಡ್' ಸ್ಥಾನಿಕ ಸಂಪಾದಕ ಬಿ.ಎಸ್. ಅರುಣ್, 'ವಿಜಯ ಕರ್ನಾಟಕ' ದೆಹಲಿ ಪ್ರತಿನಿಧಿ ವಿನಾಯಕ್ ಭಟ್, ಕರ್ನಾಟಕ ವಾರ್ತಾ ಕೇಂದ್ರದ ಸಹಾಯಕ ನಿರ್ದೆಶಕ ವೀರಣ್ಣ ಕಮ್ಮಾರ, ಸುವರ್ಣ ಚಾನೆಲ್ ವರದಿಗಾರ ಪ್ರಶಾಂತ್ ನಾತೂ ಉಪಸ್ಥಿತರಿದ್ದರು.

Monday, January 26, 2009

ಅಪಾರನ ಮುಖಪುಟಗಳು

ವಿಜಯ ಕರ್ನಾಟಕ ಮಿತ್ರ ರಘು ಅಪಾರ ಕನ್ನಡ ಪುಸ್ತಕ ಲೋಕದಲ್ಲಿ ಮುಖ ಪುಟ ವಿನ್ಯಾಸಕ್ಕೆ ಹೊಸ ಗತ್ತು ಗಮ್ಮತ್ತು ತಂದುಕೊಟ್ಟವರು. ಅವರ ಬ್ಲಾಗ್ http://raghuapara.blogspot.com/ಹೊಕ್ಕರೆ ಮುಖಪುಟ ವಿನ್ಯಾಸದ ಆಯಾಮಗಳು ತಿಳಿಯುತ್ತವೆ.
ಇಲ್ಲಿ ಅವರ ಬ್ಲಾಗ್ ನಲ್ಲಿರುವ ಮೂರು ಮುಖಪುಟಗಳ ವಿನ್ಯಾಸಗಳಿವೆ.


Thursday, January 22, 2009

ಕನ್ನಡ ಬುಕ್!

ಸ್ನೇಹಿತರೆ,
ಪುಸ್ತಕಗಳಿಗಾಗಿ ಒಂದು ಬ್ಲಾಗ್ ಆರಂಭಿಸಬೇಕು ಎಂಬ ಆಸೆಯಿತ್ತು. ಆಗಿರಲಿಲ್ಲ.
ಈಗ ಚಿತ್ರದುರ್ಗದಲ್ಲಿ ನಡೆಯುತ್ತಿರುವ 75 ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪುಸ್ತಕಗಳಿಗಾಗಿ ಈ ಬ್ಲಾಗ್ ಆರಂಭಿಸಲಾಗಿದೆ. ಕನ್ನಡ, ಇಂಗ್ಲೀಷ್ ಸೇರಿದಂತೆ ಯಾವುದೇ ಭಾಷೆಯ ಪುಸ್ತಕಗಳ ವಿವರ ಇಲ್ಲಿ ನೀಡಬಹುದು. ಕನ್ನಡಕ್ಕೆ ಆದ್ಯತೆ.

ನಿಮ್ಮ ಗಮನಕ್ಕಾಗಿ ಕೆಲ ಅಂಶಗಳು:
1. ಈ ಬ್ಲಾಗ್ ನಿಮ್ಮದು. ನೀವೇ ಇದನ್ನು ಮುನ್ನಡೆಸಿಕೊಂಡು ಹೋಗಬೇಕು.
2. ಯಾವುದೇ ಹೊಸ ಪುಸ್ತಕದ ಪರಿಚಯ ಇಲ್ಲಿ ಮಾಡಿಕೊಡಬಹುದು. ಮರೆತುಹೋದ, ಅಪರೂಪದ ಪುಸ್ತಕಗಳನ್ನೂ ಸಹ ಪರಿಚಯಿಸಬಹುದು.
3. ಪುಸ್ತಕದ ವಿಮರ್ಶೆ ಅಥವಾ ಪರಿಚಯ ವಸ್ತುನಿಷ್ಠವಾಗಿರಲಿ.
4. ಶಬ್ಧಗಳಿಗೆ ಮಿತಿ ಇಲ್ಲ. ಆದರೆ 200-300 ಶಬ್ಧಗಳ ಒಳಗೆ ಕೃತಿ ಪರಿಚಯ ಅಥವಾ ವಿಮರ್ಶೆ ಇದ್ದರೆ ಚಂದ.
5. ವ್ಯಕ್ತಿಗತ ಟೀಕೆಗಳು ಬೇಡ. ಆದಷ್ಟು ಪುಸ್ತಕದ ಪಾಸಿಟಿವ್ ಅಂಶಗಳನ್ನು ಮಾತ್ರ ಹೇಳಿ.
6. ಅಲ್ಲಿ ತಪ್ಪಾಗಿದೆ, ಇಲ್ಲಿ ಹೀಗಾಗಿದೆ, ಹೀಗೆ ಮಾಡಿದ್ದರೆ ಇನ್ನೂ ಪುಸ್ತಕ ಚನ್ನಾಗಿರುತ್ತಿತ್ತು ಎಂಬ ಫ್ರೀ ಸಲಹೆಗಳು ಬೇಡ.
7. ತೀರಾ ಸಿಲ್ಲಿ, ಸಿಲ್ಲಿ ಪುಸ್ತಕಗಳ ಪರಿಚಯ ಕಳುಹಿಸಬೇಡಿ.
8. ವಸ್ತುನಿಷ್ಠವಾಗಿರುವ, ಸಮಕಾಲೀನ ವಿಚಾರದ ಪುಸ್ತಕಗಳ ಬಗ್ಗೆ ಬರೆದರೆ ಉತ್ತಮ.
9. ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳನ್ನು ಸ್ಕ್ಯಾನ್ ಮಾಡಿ ಕಳುಹಿಸಬಹುದು.
10. ಆದರೆ ಆ ರೀತಿ ಸ್ಕ್ಯಾನ್ ಮಾಡಿದ ಪುಟಗಳು ಜೆಪಿಇಜಿ ಫಾರ್ಮ್ಯಾಟ್ ಹಾಗೂ ಉತ್ತಮ ರೆಸಲ್ಯೂಷನ್ ಇರಲಿ.
11. ನೀವೇ ಟೈಪ್ ಮಾಡಿದ್ದರೆ ನುಡಿಯಲ್ಲಿ ಟೈಪ್ ಮಾಡಿ ಕಳುಹಿಸಿ.
12. ಪುಸ್ತಕ ಪರಿಚಯ-ವಿಮರ್ಶೆ ಜೊತೆಗೆ ಪುಸ್ತಕದ ಲೇಖಕರು, ಫೋಟೋ, ವಿಳಾಸ, ದೂರವಾಣಿ, ಇ-ಮೇಲ್ ಇರಲಿ.
13. ಪುಸ್ತಕದ ಮುಖಪುಟ, ಬೆಲೆ, ಪುಟಗಳ ಸಂಖ್ಯೆಯಂತಹ ವಿವರಗಳನ್ನು ಮರೆಯದೇ ಕಳುಹಿಸಿ.
14. ಪುಸ್ತಕ ಬಿಡುಗಡೆ ಸಮಾರಂಭದ ಆಹ್ವಾನ ಪತ್ರಿಕೆಗಳನ್ನೂ ಕಳುಹಿಸಬಹುದು.
15. ಇದರಲ್ಲಿ ಕೆಲವು ಪ್ರಕಾಶಕರ ಬ್ಲಾಗ್ ಹಾಗೂ ವೆಬ್ ಸೈಟ್ ವಿವರ ನೀಡಲಾಗಿದೆ. ನಿಮಗೆ ತಿಳಿದ ಇತರೆ ಪ್ರಕಾಶಕರ ವಿವರಗಳನ್ನು ಕಳುಹಿಸಿ.

ಬರಹಗಳನ್ನು shivaprasadtr@gmail.com ಈ ಇ-ಮೇಲ್ ಗೆ ಕಳುಹಿಸಿ.
ಸಾಹಿತ್ಯಾಸಕ್ತರಿಗೆ, ನಿಮ್ಮ ಸ್ನೇಹಿತರಿಗೆ ತಾವು ಓದಿದ ಪುಸ್ತಕಗಳ ಬಗ್ಗೆ ಎಲ್ಲರೊಂದಿಗೆ ಹಂಚಿಕೊಳ್ಳಲು ಹೇಳಿ, ಬ್ಲಾಗ್ ವಿವರ ನೀಡಿ.
ನಿಮ್ಮ ಓದುವ, ಹಾಗೂ ಇತರರಿಗೆ ಓದಿಸುವ ಆಸಕ್ತಿ ನಿರಂತರವಾಗಿರಲಿ.

ನವಕರ್ನಾಟಕ ಪುಸ್ತಕಗಳು